Tuesday 6 May 2014

ಗರಮಾ ಗರಮ್ ಚುಮ್ಮು (ಮಂಡಕ್ಕಿ)ರಿ!



ಗರಮಾ ಗರಮ್ ಚುಮ್ಮು (ಮಂಡಕ್ಕಿ)ರಿ!
ತಿಳವಳ್ಳಿ ಮಂಡಕ್ಕಿ,ಬೆಳಗಾಂ ಚುರಮರಿ, ಕೊಲ್ಹಾಪುರ ಭಢ೦ಗ್ ಕುಲಒಂದು ತರಥರಹ ರುಚಿಯಲ್ಲಿ, ತಿಂದ ಮ್ಯಾಕ ತಿಳಿತದ್ರಿ. ಮಂಡಕ್ಕಿ ಯಾ ಚುರಮುರಿ,ಗರಮಾ ಗರಮ್ ಚುಮ್ಮು ರಿ ಹೆಂಗರ ಕರಿರೀ, ಯಾರಿಗೆ ಗೊತ್ತಿಲ್ಲ ಹೇಳ್ರಿ, ಧಾರವಾಡ ಲೈನ್-ಬಜಾರ್ ಬಾಬೂಸಿಂಗ್ ಪೇಢ, ಗೋಕಾಕ್-ಕರದಂಟು, ಸವಣೂರ-ಖಾರ, ಮಿರ್ಚಿ-ಭಜೀ ಭರ್ಜರಿ ತಿಂದು, ಗದಬಡಿಸಲಾರದವರು, ಡಬ್ಬಾ-ಅಂಗಡಿ ಗಿರಮಿಟ್ಟು-ಹಾಪ್ ಟೀ ಕುಡಿಯುವವರ ಮಜಾನೇ ಬೇರೆ. ಇಲ್ಲೇ ನೋಡ್ರಿ ಈ ಗಿರ್ಮಿಟ್ನ್ಯಾಗಿನ ಮೇನ್ ಐಟಮ್ ಅಂದ್ರ ಮಂಡಕ್ಕಿ, ಉಳಿದದ್ದೆಲ್ಲಾ ಮಸಾಲಿ-ಮಿರ್ಚಿ. ಈಗ ನೋಡ್ರಿ ಲೆಕ್ಕಣಿಕಿಗೆ ಬೇಕಾದ ಸರಕು ಸದರ್ ಆತು.ಈಗ ಬರಿಯಾಕ ಹತ್ತಿದ್ದು, ಐವತ್ತರ ಹಳೆ ಕಥಿ, ಗೊತ್ತಿದ್ರ ಬಿಟ್ಟ್-ಬಿಡ್ರಿ!
ಈ ಮಂಡಕ್ಕಿ ಪುರಾಣ ಸ್ವಲ್ಪ ಹೆಚ್ಚು ಕಡಿಮೆ ಒಂದು ಹಳ್ಳಿಯ ಕುಟುಂಬ, ಅಥವಾ ಆರೆಂಟು ಜನ ದಿನವಿಡೀ ದುಡಿಯುವ ಪರಿ ಬಹುಶಃ ನಿಮಗೆ ಗೊತ್ತಿರಲಿಕ್ಕಿಲ್ಲ. ಹಾಗಾದರೆ ಮದುವೆ-ಮುಂಜಿ, ಜಾತ್ರೆ, ಅಥವಾ ಯಾತ್ರೆ ಏನೇ ಇರಲಿ ಬಿಡಲಿ ಚಹಾ-ಜ್ಜೋಡಿ-ಚೂಡಾ-ಧಂಗ್, ಫಳಾರಕ್ಕ್ ಅಥವಾ ಟೈಮ-ಪಾಸ್ ಚುರಮರಿ-ಖಾರಾ ಮಾತಿನ-ಚಕಮಕಿವಳಗ ಗುಂಗಾಗುವ ನಾವು, ಈ ಮಂಡಕ್ಕಿ ಮಾಡುವರ ಪುರಾಣ(ಪಡಿ-ಪಾಟಲು) ವಸಿ-ಕೇಳಲೇ ಬೇಕು.
ಈ ಮಂಡಕ್ಕಿ ಫ್ಯಾಕ್ಟರಿಗೇ (ಮಹಾಲಿಗೆ) ಒಂದು ೬೦x೪೦ ಅಡಿ ಜಾಗೆ ಬೇಕು. ಅದರಲ್ಲಿ ೨೦x ೧೦ ಮನೆ (ಗುಡಿಸಲು) ಉಳಿದದ್ದು ಬಿಸಿಲ-ಬಯಲು ಜಾಗೆ. ಮನೆಯ ಒಂದು ಬದಿಗೆ ಎರಡು ಒಲೆಗಳಿದ್ದು ಒಂದರಮೇಲೆ ಒಂದು ಬಾಯಿ ತೆರೆದ ಡಿಸೈಲ್ ಡ್ರಮ್ಮ (ಭತ್ತ ಬೇಯಿ ಸುವ ಪಾತ್ರೆ), ಮತ್ತೊಂದು ಒಲೆ ಮೇಲೆ ಎರಡು ಅಡಿ ವ್ಯಾಸವುಳ್ಳ ಒಂದೂವರೆ ತ್ರಿಜ್ಯ ವುಳ್ಳ ಅರ್ಧ ಗೋಲಾಕಾರದ ಕಬ್ಬಿಣ ಬಾಣಾಲೆ,ಇಟ್ಟಿದ್ದು ೬x೩x೩ ಅಡಿ ಹೊಂಡ ದಿಂದ ಒಲೆಗೆ ಖೊಬ್ಬಟ್ಟು ಅಥವಾ ಕೊಂಡಾ ಉರುವಲು ಹಾಕುವ ಜಾಗೆ, ಹಾಗೂ ಉಳಿದ ಭಾಗ ದಲ್ಲಿ ಮಂಡಕ್ಕಿ ಮಾದುವರಿಗೆ ತಯಾರಾದ ಮಂಡಕ್ಕಿ ಇಡಲು ಬೇಕಾಗುತ್ತದೆ. ಹೆಚ್ಚು-ಕಡಿಮೆ ಬೆಂಕಿ ದಿನದ ೬ ಅಥವಾ ೮ ತಾಸು ಭಟ್ಟಿಗೆ ಉರುವಲು ಹಾಕುವ ಕೆಲಸ ಒಬ್ಬಾತ ಮಾಡುತ್ತಿರುತ್ತಾನೆ. ಭತ್ತದ ಹೊಟ್ಟು ಉರುವಲು ತೂರಿ ದಾಗ ಒಲೆ ಮೇಲಿನ ಕೆಲಸ ನಡಿಯೋದು.
ದಿನಕ್ಕೆ ಸುಮಾರು ಒಂದು ಕ್ವಿಂಟಾಲ್ ಭತ್ತ ಡ್ರಮ್ಮ ಗೆ ಸುರುವಿ ಸಾಕಷ್ಟು ನೀರು ಅದಕ್ಕೆ ಹಾಕಿ ಅನ್ನದಂತೆ ಭತ್ತ ವನ್ನು ಒಂದು ಹದಕ್ಕೆ ಬೇಯಿಸುತ್ತಾರೆ. ಬೆಂದ ಎಸರು-ಭತ್ತವನ್ನು ಎರಡು ಚೀಲ ದಲ್ಲಿ ತುಂಬಿ ಇಬ್ಬರು ಆ ಕೋರೆ ಚೀಲ ಹಿಟ್ಟಿನ ಗಿರಣಿ (ಮಿಲ್ಲಿಗೆ) ವೈದು, ಬೀಸುವ ಕಲ್ಲಿನ ಹಾಪರ್ಗೆ ಸುರುವಿ ಬಿಸಿದಾಗ, ಭತ್ತವು ಒಡಕಲು ಅಕ್ಕಿ ಮತ್ತು ಖೊಬ್ಬಟ್ಟು ಮಿಶ್ರಣ ವಾಗಿ ಮಾರ್ಪಡುತ್ತದೆ, ಪುನಃ ಭಟ್ಟಿಗೆ ತಂದು ಕಣದಲ್ಲಿ ತೂರಿ, ವಡಕಲನ್ನು ೨೦-೩೦ ಚಾಪೆ ಹಾಕಿ ಅದರಮೇಲೆ ಕಡಕ-ಬಿಸಿಲಲ್ಲಿ ಸುಮಾರು ನಾಲ್ಕು ತಾಸು ಕೈ ಯಾಡಿಸಿ ಒಣಗಿಸುತ್ತಾರೆ. ಒಣಗಿದಂತೆ, ಒಂದೊಂದು ಚಾಪೆ ಅಕ್ಕಿ ಭಟ್ಟಿಗೆ ತರುವ ಕೆಲಸ ಒಬ್ಬನದು. ಭಟ್ಟಿಯಲ್ಲಿ ಒಂದು ಹೆಣ್ಣಾಳು ಒಂದು ಮರ ಹಿಡಿದು ಕಾಲುಚಾಚಿ ಕುಟ್ಟು ಎರಡು ಹಿಡಿ ಅಕ್ಕಿ ಮರಕ್ಕೆ ಹಾಕಿ ತಯಾರಿಟ್ಟ ಉಪ್ಪಿನ ಹನಿ ಚಿಮುಕಿಸಿ ಸೊಂಕಿಸಿ ಕಯಾಡಿಸುತ್ತ ಮುಗಿದ ಮೇಲೆ ಇನ್ನೊಂದು ಮರ ತಯಾರು ಮಾಡುವದು ಕೆಲಸ ಮುಗಿಯುವತನಕ, ಪುರುಸತ್ತಿಲ್ಲದ ಕೆಲಸ ಅವಳದು. ಬಾಣಾಲೆ ಯಲ್ಲಿ ಹುರಿಯಲು ಒಬ್ಬನು ಸಿದ್ಧನಾಗಿ ಅಲ್ಲಿ ಕುಳಿತು, ಬಾಣಾಲೆ ಯಲ್ಲಿ ಎರಡು ಬುಟ್ಟಿ ಹೊಳೆ ಉಸುಕು ಮಣ್ಣು ಸುರಿ ಯುತ್ತಾನೆ. ಅದು ಚೆನ್ನಾಗಿ ಬೆಂಕಿಯಷ್ಟು ಕಾದುಕಪ್ಪಾದ ಮೇಲೆ, ಈ ಉಪ್ಪು ಹಚ್ಚಿದ ಒಬ್ಬೆ (ಮರ) ತೆಗೆದುಕೊಂಡು, ಕಾದಬಾಣಾಲೆಗೆ ಸುರುವಿ ಅದನ್ನು ಒಂದು ಕಬ್ಬಿಣ ಸೌಟಿನಂಥ ಫೋರ್ಕ್ ಸಲಾಕೆ ಇಂದ ಬಲಗೈ ಯಿಂದ ಉಸುಕು-ಅಕ್ಕಿ ಮಿಶ್ರಣ ತಿರುವುತ್ತಾನೆ. ಕಾದ ಉಸುಕಿನಲ್ಲಿ ವದಕಲು ಅಕ್ಕಿ ‘ಹೂ’ವಿನಂತೆ ಅರಳಿ ಅಕ್ಕಿ ಮಂಡಕ್ಕಿ ಆಗುತ್ತದೆ. ಬಲಗೈ ಫೋರ್ಕನ್ನು ಎಡಗೈ ಗೆ ಬದಲಿಸಿ ಪುನಃ ಕೈ ಬಾಣಾಲೆಯಲ್ಲಿ ಕೈಹಿಡಿ ತಿರುವುತ್ತಾನೆ. ಆಗ ತಯಾರಾದ ಮಂಡಕ್ಕಿ ಯನ್ನು ಒಂದು ಅಗಲ ಬಾಣಲೆ ತರದ ಜರಡಿ ಯಿಂದ ಉಸುಕು ಸೂಸಿ, ಚೊಕ್ಕ ಮಂಡಕ್ಕಿ ಅದಕ್ಕಾಗಿ ಮೀಸಲಿಟ್ಟ ಜಾಗೆಗೆ ತೂರು(ಎಸೆ)ಯುತ್ತಾನೆ. ಮಂಡಕ್ಕಿ ಕೆಲಸ ಆದ ಮೇಲೆ, ಹಸನಾಗಿ ತಯಾರಾದ ೧೫-೨೦ ಗೋಣಿ ಚೀಲ ಮಂಡಕ್ಕಿ ಚೀಲಕ್ಕೆ ತುಂಬಿ, ಮಾರಟಕ್ಕೆ ಅಣಿ ಮಾಡುತ್ತಾನೆ. ಪೇಟೆಯಲ್ಲಿ ಅಳತೆ ಪ್ಲಾಸ್ಟಿಕ್ ಚೀಲದಲ್ಲಿ ಅಂಗಡಿ ಸೇರಿದರೆ,ಸಂತೆ ಯಿಂದ ಕೈಚೀಲ ದಲ್ಲಿ ತಂದ ಮಂಡಕ್ಕಿ ಮನಯಲ್ಲಿ ಭದ್ರವಾಗಿ ಡಬ್ಬ ಸೇರುತ್ತದೆ. ಚಹಾದ ಅಂಗಡಿ ಯಲ್ಲಿ ಬಗೆ ಬಗೆ ತಿಂಡಿ ಗಳಾಗಿ ಜನರ ತನು-ಮನ ಸೆಳೆದರೆ, ಸಿಕ್ಕ ಬೇಜಮಿ(ಹಣ)ದಲ್ಲಿ ಕಾಮಗಾರ ತನ್ನ ಬೆವರಹನಿ ಇಳಿಸಿದ ಫಲ ಪಡೆದು ನೆಮ್ಮದಿ ನಿಟ್ಟುಸಿರು ಬಿಡುತ್ತಾನೆ. ಈ ರೀತಿ ಪ್ರತಿ ಪ್ರಾಣ ಹಸಿವೆಂಬ ಜೀವ ಹುಲಿಗೆ ಹಣೆಬರಹದ ಕಾಮಗಾರ ಕುರಿ ಬಲಿ ಆಗಲೇ ಬೇಕು ಇದು ಅವರವರವರ ಪಾಲಿನ ಬದುಕು ಜಟಕಾ ಬಂಡಿ. ಅಧುನಿಕ ಸರ್ವಜ್ನ್ಯ D.V.G.ರವರು ಬರೆದ ಕಗ್ಗ ವೊಂದು “ಬದುಕಿಗಾರ್ ನಾಯಕರು ಏಕನೋ ಅನೆಕರೋ “ ಎಂಬ ನಿತ್ಯ ಪ್ರಶ್ನೆ ಕಾಡುತ್ತದೆ. ಆದರೆ ಉತ್ತರವೂ ಅದರಲ್ಲೇ ಅಡಕವಾಗಿದೆ.
PS: ಬದುಕಿನಲ್ಲಿ ಉಲ್ಹಾಸ ಹರಡುವದು, ಸುಖ-ದುಃಖ-ನೆಮ್ಮದಿ ಹಂಚಿಕೊಳ್ಳುವದು, ಕನ್ನಡ ನಾಡ-ನುಡಿ ಜನ-ಮನ-ದನಿ, ಮನದಾಳ ಅನುಭವ ಹೊರ ಹಾಕುವ ಪ್ರಯತ್ನ ಓದುಗರಲ್ಲಿ ನನ್ನದು ಹಾಳು ರಗಳೆ ಅನ್ನಿಸಲಾರದೆಂದು ನನ್ನಭಾವನೆ. ಸರಿ ಕಾಣದಿದ್ದರೆ, ಅಥವಾ ನನ್ನ ಬರಹ ಬೇಡ ವೆನಿಸಿದರೆ ಖಂಡಿತ ತಿಳಿಸಿ. ತಮ್ಮಗಳ ಅಭಿಮಾನ ಗೌರವಿಸುತ್ತೇನೆ.
B.R. Bhate, Dharwad. Dt:07-04-2014

No comments:

Post a Comment